ದಾಂಡೇಲಿ : ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಇದರ ಹುಬ್ಬಳ್ಳಿ – ದಾರವಾಡ ನಗರ ಶಾಖೆಯ ಆಶ್ರಯದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಮತ್ತು ನಗರದ ಪಾಟೀಲ್ ಆಸ್ಪತ್ರೆಯ ಡಾ.ಮೋಹನ ಪಾಟೀಲ್ ಅವರ ಸಹಭಾಗಿತ್ವದಲ್ಲಿ ಜೂನ್ 1ರಂದು ಸಾಂಬ್ರಾಣಿ ಮತ್ತು ಭಾಗವತಿಯಲ್ಲಿ ಗೌಳಿ ಮತ್ತು ಸಿದ್ದಿ ಸಮುದಾಯದ ಜನರಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.
ಜೂನ್ 1ರಂದು ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 12:30 ಗಂಟೆವರೆಗೆ ಸಾಂಬ್ರಾಣಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ ಅದೇ ದಿನ ಮಧ್ಯಾಹ್ನ 1.30 ಗಂಟೆಯಿಂದ ಸಂಜೆ 4:30 ಗಂಟೆಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗವತಿಯಲ್ಲಿ ಈ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ವೈದ್ಯರು ಭಾಗವಹಿಸಿ ಆರೋಗ್ಯ ತಪಾಸಣೆಯನ್ನು ನಡೆಸಲಿದ್ದಾರೆ.
ಈ ಶಿಬಿರದಲ್ಲಿ ಎದೆಯ ಗಂಟು, ಥೈರಾಯ್ಡ್ ಗಡ್ಡೆ, ಹರ್ನಿಯಾ, ಹೊಟ್ಟೆ ನೋವು, ದೇಹದ ವಿವಿಧ ಭಾಗಗಳಲ್ಲಿ ಗಂಟು, ಉಬ್ಬಿರುವ ರಕ್ತನಾಳಗಳು, ವೆರಿಕೋಸ್, ವೇನ್ಸ್, ಮೂಲವ್ಯಾಧಿ, ಹೊಟ್ಟೆಯಲ್ಲಿ ಗಂಟು, ಹುಣ್ಣುಗಳು ಮತ್ತು ಕುರು ಇದರ ಬಗ್ಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತದೆ. ಈ ಶಿಬಿರದಲ್ಲಿ ತಪಾಸಣೆಯ ಸಂದರ್ಭದಲ್ಲಿ ಈ ಮೇಲಿನ ಕಾಯಿಲೆಗಳ ಬಗ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಲ್ಲಿ, ಆಯ್ಕೆಯಾದವರಿಗೆ ದಾಂಡೇಲಿಯ ಪಾಟೀಲ್ ಆಸ್ಪತ್ರೆ ಇಲ್ಲವೇ ಹುಬ್ಬಳ್ಳಿಯ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಯಾವುದೇ ಖರ್ಚಿಲ್ಲದೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು.
ಈ ಶಿಬಿರದಲ್ಲಿ ಗೌಳಿ ಮತ್ತು ಸಿದ್ದಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಡಾ. ಮೋಹನ ಪಾಟೀಲ್ ಅವರು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.